Good information. Thank you.

Each n every fraction of a moment is science.
On 28 Feb 2016 08:33, "HAREESHKUMAR K Agasanapura" <harihusk...@gmail.com>
wrote:

>
> http://m.vijaykarnataka.com/state/vk-special/VK-Special-C-V-Raman-Today-National-Science-Day/articleshow/51172165.cms
>
> *ಅನುದಿನವೂ ವಿಜ್ಞಾನ ದಿನವಾಗಲಿ!*
>
> Feb 28, 2016, 04.00 AM IST
>
> WhatsappFacebookGoogle PlusTwitterEmail
>
> C-V-Raman
>
> AAA
>
> ಇಂದು ರಾಷ್ಟ್ರೀಯ ವಿಜ್ಞಾನ ದಿನ. ವಿಶ್ವ ವಿಖ್ಯಾತ ವಿಜ್ಞಾನಿ ಸರ್. ಸಿ.ವಿ. ರಾಮನ್,
> ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು
> ಪ್ರತಿಪಾದಿಸಿದ ದಿನ. ಮಾನವನ ಏಳ್ಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ವಹಿಸುತ್ತಿರುವ
> ಮಹತ್ತರ ಪಾತ್ರವನ್ನು ಗುರುತಿಸಿ, ಆ ವಲಯಕ್ಕೆ ಮತ್ತಷ್ಟು ಬಲತುಂಬುವ, ಸಂಶೋಧನಾ ರಂಗದಿಂದ
> ವಿಮುಖರಾಗುತ್ತಿರುವ ಪೀಳಿಗೆಯನ್ನು ವಿಜ್ಞಾನಮುಖಿಯಾಗಿಸುವ ಕೆಲಸ ಆಗಬೇಕಿದೆ.
>
> -----
> * ಸುಧೀಂದ್ರ ಹಾಲ್ದೊಡ್ಡೇರಿ
> ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟು ಹದಿನಾರು ವರ್ಷಗಳು ಉರುಳಿವೆ. ಕಳೆದೊಂದು
> ಶತಮಾನದತ್ತ ಅವಲೋಕಿಸಿದಾಗ ನಿಚ್ಚಳವಾಗಿ ಕಂಡುಬರುವುದು ವಿಜ್ಞಾನದೊಂದಿಗೆ ನಡೆದ ಅನುಸಂಧಾನದ
> ಚರಿತ್ರೆಯೇ. ವಿಜ್ಞಾನದ ಜತೆಗಿನ ಈ ಅನುಸಂಧಾನ ಮಾನವ ಚಿಂತನೆಯ ದಿಕ್ಕನ್ನೇ ಬದಲಿಸಿದೆ.
> ವಿಜ್ಞಾನ ಸಂಶೋಧನೆಗಳು, ಚಿಂತನೆಗಳು, ಅವುಗಳಿಂದ ಮೂಡಿದ ತಂತ್ರಜ್ಞಾನ ಹೊಸ ಸಂಸ್ಕೃತಿಯ
> ಹುಟ್ಟಿಗೆ ನಾಂದಿ ಹಾಡಿವೆ. ಮನುಕುಲದ ಇತಿಹಾಸದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಷ್ಟು
> ವೈಜ್ಞಾನಿಕ ಪ್ರಗತಿ ಇನ್ಯಾವ ಕಾಲದಲ್ಲಿಯೂ ನಡೆದಿಲ್ಲ. ಈ ಪ್ರಗತಿಯ ಬಗ್ಗೆ ಮಾತನಾಡುವಾಗ
> ಕೂಡಲೇ ನಮ್ಮ ನೆನಪಿಗೆ ಬರುವುದು ಅದು ಕೊಟ್ಟಿರುವ ಐಹಿಕ ಸುಖಸಾಧನಗಳು. ಅದು ಮಿಂಚಿನ ವೇಗದ
> ವಿಮಾನ - ಅಂತರಿಕ್ಷ ಶಟಲ ಪಯಣವಾಗಿರಬಹುದು. ಇಲ್ಲವೆ ಜಗತ್ತನ್ನೇ ಒಂದು ಪುಟ್ಟ
> ಹಳ್ಳಿಯಾಗಿಸಿಬಿಟ್ಟಿರುವ ಟೆಲಿಫೋನ್-ಇಂಟರ್‌ನೆಟ್ ಸಂಪರ್ಕವಿರಬಹುದು. ಅಥವಾ ಕಣ್ಣು
> ಮಿಟಕಿಸುವಷ್ಟರಲ್ಲಿ ಮೇಲೇರುತ್ತಾ ಕೃತಕ ಉಪಗ್ರಹವೊಂದನ್ನು ಉಡ್ಡಯಿಸಿರುವ ರಾಕೆಟ್
> ಆಗಿರಬಹುದು. ಹೀಗೆ ಕಳೆದೊಂದು ಶತಮಾನದಿಂದ ಮೂಲ ವಿಜ್ಞಾನ ಮತ್ತದಕ್ಕೆ ಪೂರಕವಾಗಿರುವ
> ತಂತ್ರಜ್ಞಾನ ನಮ್ಮೆಲ್ಲರ ಕಲ್ಪನೆಯನ್ನೂ ಮೀರಿ ಬೆಳೆಯುತ್ತಿದೆ. ವಿಜ್ಞಾನ ನೇರವಾಗಿ, ಹಲವು
> ಬಾರಿ ಪರೋಕ್ಷವಾಗಿ ಇಪ್ಪತ್ತನೆಯ ಶತಮಾನದ ರಾಜಕೀಯ ವಿಪ್ಲವಗಳಿಗೆ, ಸಾಮಾಜಿಕ ಪಲ್ಲಟಗಳಿಗೆ,
> ಜಾಗತಿಕ ಆರ್ಥಿಕ ಏಳು-ಬೀಳುಗಳಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ವಿಜ್ಞಾನ ಮಾನವನ ಬೌದ್ಧಿಕ
> ಚಿಂತನೆಯ ವಿಧಾನವನ್ನೇ ಬದಲಾಯಿಸಿದೆ.
>
> ಈ ಅಗಾಧ ವಿಶ್ವದಲ್ಲಿ ಸದ್ಯಕ್ಕೆ ಗುರುತಿಸಿರುವಂತೆ ಜೀವಿಗಳಿರುವ ಏಕೈಕ ಗ್ರಹ ನಮ್ಮ ಭೂಮಿ.
> ಈ ಭೂಮಿ ತನ್ನದೇ ಅಕ್ಷದಲ್ಲಿ ಸುತ್ತುವ ವೇಗವನ್ನು ಭೂಮಧ್ಯ ರೇಖೆಯ ಹತ್ತಿರ ಅಳೆದರೆ ಅದು
> ಗಂಟೆಗೆ ಒಂದು ಸಾವಿರ ಮೈಲಿಗಳು. ಅಕಸ್ಮಾತ್ ಈ ವೇಗ ಗಂಟೆಗೆ ನೂರು ಮೈಲುಗಳಿಗೆ ಇಳಿದರೆ
> ಏನಾಗುತ್ತದೆ? ನಮ್ಮ ದಿನ ಮತ್ತು ರಾತ್ರಿಗಳ ಅವಧಿ ಹತ್ತು ಪಟ್ಟು ಹೆಚ್ಚಾಗುತ್ತದೆ. ಸೂರ್ಯ
> ಹೆಚ್ಚು ಕಾಲ ಪ್ರಜ್ವಲಿಸಿದಂತೆ ಹಸಿರೆಲ್ಲ ನಾಶವಾಗಬಹುದು. ಸೂರ್ಯನ ತಾಪಮಾನ ಹತ್ತು ಸಹಸ್ರ
> ಡಿಗ್ರಿ ಫ್ಯಾರನ್‌ಹೀಟ್ ಎಂದು ಅಂದಾಜು ಮಾಡಲಾಗಿದೆಯಲ್ಲವೆ? ನಮ್ಮ ಭೂಮಿ ಕಾಪಾಡಿಕೊಂಡಿರುವ
> ದೂರದಿಂದ ನಾವಿನ್ನೂ ಸುರಕ್ಷವಾಗಿದ್ದೇವೆ. ಈ ದೂರ ಹೆಚ್ಚಾದರೆ ಸಾಕಷ್ಟು ಬಿಸಿಯಿಲ್ಲದೆ ನಮ್ಮ
> ರಕ್ತ ಹೆಪ್ಪುಗಟ್ಟಬಹುದು. ದೂರ ಕಮ್ಮಿಯಾದರೆ ಆ ಸುಡು ತಾಪಮಾನಕ್ಕೆ ನಾವೆಲ್ಲಾ ಸುಟ್ಟು
> ಕರಕಲಾಗಬಹುದು. ನಮ್ಮ ಭೂಮಿ ಸೂರ್ಯನನ್ನು ಸುತ್ತುವುದು ಇಪ್ಪತ್ಮೂರು ಡಿಗ್ರಿ ಕೋನದಲ್ಲಿ. ಈ
> ಕಾರಣದಿಂದ ನಮ್ಮಲ್ಲಿ ಋತು ಬದಲಾವಣೆ. ಈ ವಾಲುವ ಕೋನದ ಬದಲು ಭೂಮಿ ನೆಟ್ಟಗೆ ಸೂರ್ಯನನ್ನು
> ಸುತ್ತಿದ್ದರೆ? ಸಾಗರದ ನೀರೆಲ್ಲಾ ಆವಿಯಾಗಿ, ಆ ಆವಿ ತಂಪಾಗಿ ಇಡೀ ಭೂಮಂಡಲದ ತುಂಬ
> ಮಂಜುಗಡ್ಡೆಯ ರಾಶಿಯೇ ತುಂಬಿರುತ್ತಿತ್ತು. ಇನ್ನು ಚಂದ್ರ ಮತ್ತು ಭೂಮಿಗಿರುವ ಅಂತರ
> ಹೆಚ್ಚಾಗಿದ್ದಿದ್ದರೆ? ಗುರುತ್ವಾಕರ್ಷಣೆಯಲ್ಲಿ ಏರುಪೇರಾಗಿ ಸಮುದ್ರಗಳೆಲ್ಲ ಉಕ್ಕಿ ಹರಿದು
> ನಾವೆಲ್ಲ ಕೊಚ್ಚಿ ಹೋಗುತ್ತಿದ್ದೆವೇನೊ? ಇದೇ ರೀತಿ ಭೂಮಿಯೊಳಗಿನ ಕೇಂದ್ರದ ಸ್ಥಾನ
> ಹೆಚ್ಚೂ-ಕಮ್ಮಿಯಾಗಿದ್ದರೆ? ಸಾಗರ ಮತ್ತಷ್ಟು ಆಳವಾಗಿದ್ದರೆ? ಆಮ್ಲಜನಕ ಮತ್ತು ಇಂಗಾಲದ ಡೈ
> ಆಕ್ಸೈಡ್ ಪ್ರಮಾಣದಲ್ಲಿ ಏರುಪೇರಾಗುತ್ತಿತ್ತು. ಮನುಷ್ಯನೂ ಸೇರಿದಂತೆ ನಮ್ಮೆಲ್ಲ ಜೈವಿಕ
> ಪರಿಸರಕ್ಕೆ ಪೂರಕವಾದ ಸಹಸ್ರಾರು ಅಂಶಗಳು ಏಕಕಾಲದಲ್ಲಿ ಒಂದೆಡೆ ಮೇಳೈಸುವ ಸಾಧ್ಯತೆ ಎಷ್ಟು?
> ಗ್ರಹವೊಂದರ ಮೇಲೆ ಜೀವ ವಿಕಾಸವಾಗಲು ಅಗತ್ಯವಾದ ಪೂರಕ ಅಂಶಗಳೆಲ್ಲಾ ಏಕ ಕಾಲಕ್ಕೆ ಮೇಳೈಸಲು
> ಅದೆಷ್ಟು ಲಕ್ಷ ಕೋಟಿಗಳಲ್ಲಿ ಒಂದು ಸಾಧ್ಯತೆಯೊ? ಎಣಿಸಲಾಗದು. ಈ ಒಂದು ಕುತೂಹಲ
> ನಮ್ಮೆಲ್ಲರನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳತ್ತ ಸೆಳೆಯುತ್ತಲೇ ಬಂದಿದೆ.
>
> 1930ರಿಂದ ಇಂದಿನವರೆಗೆ - ಭಾರತದಲ್ಲೇ ಹುಟ್ಟಿ, ಬೆಳೆದು, ತಮ್ಮ ಕಾರ್ಯಕ್ಷೇತ್ರವನ್ನು
> ವಿದೇಶಕ್ಕೆ ಬದಲಿಸದ ಏಕೈಕ ನೊಬಲ್ ಪುರಸ್ಕೃತ ವಿಜ್ಞಾನಿ - ಸಿ.ವಿ.ರಾಮನ್.
>
> ರಾಮನ್ ಮತ್ತು ಅವರು ಹುಟ್ಟು ಹಾಕಿದ ಅಪ್ಪಟ ಸ್ವಾವಲಂಬನೆಯ ವಿಜ್ಞಾನ ಚಿಂತನೆಯ ಬಗ್ಗೆ
> ಚರ್ಚೆ ಮಾಡಲೇಬೇಕಾದ ಸಂದರ್ಭವಿದು. ಜಗತ್ತಿನ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯರು
> ಮಹತ್ವದ ಪಾತ್ರವಹಿಸಲಿದ್ದಾರೆಂದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಈಗಾಗಲೇ ಮನವರಿಕೆಯಾಗಿದೆ.
> ದೇಶವೊಂದರ ಆರ್ಥಿಕ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ಇಂದಿನ ವಿಶ್ವ
> ವ್ಯಾಪಾರ ಸಂಸ್ಥೆಯಿಂದ ಪ್ರೇರಿತವಾದ ಜಾಗತೀಕರಣದ ಕಾಲದಲ್ಲಿ ವಿಜ್ಞಾನ ಮತ್ತು
> ತಂತ್ರಜ್ಞಾನಕ್ಕೆ ಉತ್ತೇಜನ ನೀಡದಿರುವ ದೇಶಗಳಿಗೆ ಉಳಿಗಾಲವಿಲ್ಲ. ಜಗತ್ತಿನೆಲ್ಲೆಡೆ ನೊಬಲ್
> ಪುರಸ್ಕೃತರನ್ನು ಪೋಷಿಸುವ ಸಂಸ್ಥೆ ವಿಶ್ವವಿದ್ಯಾಲಯ. ಈ ನಿಟ್ಟಿನಲ್ಲಿ ನಮ್ಮ ದೇಶದ
> ವಿಶ್ವವಿದ್ಯಾಲಯಗಳು ಕಳೆದ ಎಂಬತ್ಮೂರು ವರ್ಷಗಳಲ್ಲಿ ಮತ್ತೊಬ್ಬ ಸಿ.ವಿ.ರಾಮನ್ ಅನ್ನು
> ಕೊಟ್ಟಿಲ್ಲ. ಇದರ ಬಗ್ಗೆ ಕಾರಣ ಹುಡುಕ ಹೊರಟರೆ ನಮ್ಮೆಲ್ಲ ಪ್ರತಿಭಾವಂತ ವಿದ್ಯಾರ್ಥಿಗಳು
> ಮೂಲ ವಿಜ್ಞಾನ ಅಧ್ಯಯನದಿಂದ ವಿಮುಖರಾಗಿರುವ ಕಠೋರ ಸತ್ಯ ಗೋಚರಿಸುತ್ತದೆ. ಒಂದೆಡೆ
> ಸಂಪನ್ಮೂಲಗಳ ಕೊರತೆ, ಮತ್ತೊಂದೆಡೆ ಅನ್ವೇಷಕ ಪ್ರವೃತ್ತಿಯ ವಿದ್ಯಾರ್ಥಿಗಳ ಅಭಾವ. ಈ
> ನೆಪಗಳಿಗೂ ಮಿಗಿಲಾದ ಒಂದು ಪ್ರಮುಖ ಕಾರಣವೊಂದಿದೆ. ಅದುವೇ ಬದಲಾಗುತ್ತಿರುವ ಆದ್ಯತೆ.
>
> ಜಗತ್ತಿನ ಮೂರನೆಯ ಅತಿ ದೊಡ್ಡ ಸಂಖ್ಯೆಯ ವಿಜ್ಞಾನ (ತಂತ್ರಜ್ಞಾನ) ಪದವೀಧರರನ್ನು
> ಉತ್ಪಾದಿಸುತ್ತಿರುವ ದೇಶ ನಮ್ಮದು. ಇಂಥದೊಂದು ಕ್ಲೀಶೆಯ ವಾಕ್ಯ ಆಗಿಂದಾಗ್ಗೆ ಕಿವಿಗೆ
> ತಪ್ಪದೇ ಬೀಳುತ್ತಿರುತ್ತದೆ. ಈ ಮಾತುಗಳು ನಿಜವೇ ಆಗಿದ್ದರೆ ಮತ್ತೊಬ್ಬ ರಾಮನ್ ನಮ್ಮ
> ದೇಶದಲ್ಲೇಕೆ ಹುಟ್ಟಲಿಲ್ಲ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸದ್ಯಕ್ಕೆ ಫ್ಯಾಕ್ಟರಿಯಲ್ಲಿ
> ಹೊರಬರುವ ಉತ್ಪನ್ನಗಳಂತೆ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ
> ಏರುತ್ತಿದೆ. ಆದರೆ ಮೂಲ ವಿಜ್ಞಾನ ವಿಷಯಗಳನ್ನು ಗಂಭೀರವಾಗಿ ಅಭ್ಯಸಿಸುವವರ ಸಂಖ್ಯೆ
> ಕ್ಷೀಣಿಸುತ್ತಿದೆ. ಇನ್ನು ಎಂಜಿನಿಯರಿಂಗ್ ಪದವೀಧರರೂ ಹೆಚ್ಚಿನ ಪರಿಶ್ರಮವಿಲ್ಲದ (ದೇಹಕ್ಕೆ
> ಮತ್ತು ಮಿದುಳಿಗೆ) ಕೆಲಸಗಳತ್ತಲೇ ಗಮನ ಹರಿಸುತ್ತಿದ್ದಾರೆ. ತಮ್ಮದೇ ದೇಶ ಕಟ್ಟುವ
> ಸವಾಲೆಸೆಯಬಲ್ಲ ಕೆಲಸಗಳಿಂದ ವಿಮುಖರಾಗುತ್ತಾ ವಿದೇಶಗಳಲ್ಲಿ ಸಾಮಾನ್ಯರೂ ಮಾಡಬಹುದಾದಂಥ
> ಸಣ್ಣ-ಪುಟ್ಟ ಕೆಲಸಗಳಿಗೆ ಶರಣಾಗುತ್ತಿದ್ದಾರೆ.
>
> ರಾಮನ್ನರೇಕೆ, ವಿಶ್ವೇಶ್ವರಯ್ಯನವರನ್ನೂ ಮರೆತಿರುವ ಕಾಲವಿದು. ಕಾರು ಕಾರ್ಖಾನೆ ಕೊಡದೇ
> ಸತಾಯಿಸಿದ ಬ್ರಿಟಿಷರನ್ನು ಸಾಕಷ್ಟು ಒತ್ತಾಯಿಸಿ ಕಡೆಗೆ ವಿಮಾನ ಕಾರ್ಖಾನೆಯೊಂದನ್ನು
> ಬೆಂಗಳೂರಿಗೆ ಕೊಡುವಂತೆ ಮಾಡಿದ ಮೇರು ತಂತ್ರಜ್ಞ ವಿಶ್ವೇಶ್ವರಯ್ಯ. ಅಂದಿನ ಅವರ
> ಪರಿಶ್ರಮದಿಂದಾಗಿಯೇ ಬೆಂಗಳೂರಿಗೆ ದೇಶದ ವೈಮಾಂತರಿಕ್ಷ ರಾಜಧಾನಿಯೆಂಬ ಬಿರುದು. ಎಲ್ಲ
> ವಿದೇಶಿ ಅಸಹಕಾರಗಳನ್ನು ಎದುರಿಸಿ ದೇಶೀಯವಾಗಿ ವಿಮಾನಗಳನ್ನು ವಿನ್ಯಾಸ ಮಾಡಿ, ಅಗ್ಗದ
> ದರದಲ್ಲಿ ತಯಾರಿಸಿ ಗಡಿ ಕಾಯುವ ವಾಯುಪಡೆಗೆ ಸತತವಾಗಿ ವಿಮಾನಗಳನ್ನು ಪೂರೈಸುತ್ತಿರುವ
> ಕಾರ್ಖಾನೆ ಬೆಂಗಳೂರಿನಲ್ಲಿಯೇ ಇದೆ. ಸಶಕ್ತನಾಗಿದ್ದರೆ ಮಾತ್ರ ಮತ್ತೊಬ್ಬ ಶಕ್ತ ನಮ್ಮನ್ನು
> ಗೌರವಿಸಬಲ್ಲ ಎಂಬ ಮಾತುಗಳೊಂದಿಗೆ ದೇಶದ ಪರಮಾಣು ಶಕ್ತಿ ಮತ್ತು ರಕ್ಷಣಾ ಸಂಶೋಧನಾ
> ಇಲಾಖೆಗಳನ್ನು ಸ್ವಾವಲಂಬನೆಯ ದಾರಿಗೆ ಎಳೆದ ರಾಜಾರಾಮಣ್ಣನವರನ್ನೂ ಇಂದು ನೆನೆಯಬೇಕು. ಸೂಪರ್
> ವಾಹಕಕ್ಕೆ ಸಂಬಂಧಿಸಿದ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ಇದೀಗ
> ನ್ಯಾನೊ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್,
> ವಾಯು ಚಲನ ವಿಜ್ಞಾನದ ಜಗದ್ಗುರು ರೊದ್ದ ನರಸಿಂಹ, ಬಾಹ್ಯಾಕಾಶ ಕ್ಷೇತ್ರದಲ್ಲಿನ ದೇಶದ
> ಅಪ್ರತಿಮ ಸಾಧನೆಯ ರೂವಾರಿ ಉಡುಪಿ ರಾಮಚಂದ್ರ ರಾವ್, ಜೀವ ವಿಜ್ಞಾನದ ಕ್ಲಿಷ್ಟ
> ಲೆಕ್ಕಾಚಾರಗಳನ್ನು ಗಣಿತದೊಂದಿಗೆ ತಾಳೆನೋಡುತ್ತಾ ಪರಿಸರ ವಿಜ್ಞಾನದಲ್ಲಿ ವಿಶ್ವಮಾನ್ಯ
> ಸಾಧನೆಗೈದಿರುವ ಮಾಧವ ಗಾಡ್ಗೀಳ್, ಪರಮಾಣು ವಿಜ್ಞಾನವನ್ನು ಕಲಿತೂ ಗಾಂಧಿವಾದಿಯಾಗಿ
> ರೂಪುಗೊಂಡು ಸಾಮಾನ್ಯರಿಗೆ ವಿಜ್ಞಾನ ಮುಟ್ಟಿಸಿದ ಹೆಚ್.ನರಸಿಂಹಯ್ಯ, ರಾಕೆಟ್ ತಂತ್ರಜ್ಞಾನ
> ಅಭ್ಯಸಿಸಿ ದೇಶದ ಮುಂಚೂಣಿ ಯೋಜನೆಗಳ ಸೂತ್ರಧಾರಿಯಾದ ಅಬ್ದುಲ್ ಕಲಾಮ್ .... ನಮ್ಮ ವಿಜ್ಞಾನ
> ವಿದ್ಯಾರ್ಥಿಗಳಿಗೆ ರೋಲ್ ಮಾಡಲ್ಗಳಾಗಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವೂ ಮುಂಚೂಣಿ
> ರಾಷ್ಟ್ರಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಹುದು. ವಿಜ್ಞಾನಗಳು ಕೇವಲ ಪ್ರಯೋಗಗಳಿಗೆ
> ಸೀಮಿತವಾಗದೆ, ಎಲ್ಲ ಶೋಷಿತ ಮನುಜರ ಬಿಡುಗಡೆಯ ಹಾದಿಯಾಗಿ, ಸಾಮಾಜಿಕ ದುರಂತಗಳ ಬಗ್ಗೆ
> ಎಚ್ಚರಿಸುವ ದನಿಯಾಗಬೇಕು. ಇಂದು ಮಾತ್ರವಲ್ಲ, ಅನುದಿನವೂ ವಿಜ್ಞಾನ ದಿನವಾಗಲಿ ಎಂಬುದು
> ವಿಜ್ಞಾನಾಸಕ್ತರೆಲ್ಲರ ಹಾರೈಕೆ.
>
> ರಾಮನ್ ಪರಿಣಾಮ
>
> ಸಾಗರದ ಮೇಲೊಂದು ಹಡಗಿನ ಪಯಣ ಬಹುದೊಡ್ಡ ಆವಿಷ್ಕಾರಕ್ಕೆ ಕಾರಣವಾಗಬಹುದೆಂಬ ಕಲ್ಪನೆ ಬಹುಶಃ
> ಸಿ.ವಿ.ರಾಮನ್ ಅವರಿಗೂ ಇರಲಿಲ್ಲ. 1921ರ ಬೇಸಗೆಯಲ್ಲಿ ಅವರು ಭಾರತದಿಂದ ಲಂಡನ್ನಿನತ್ತ
> ಕೈಗೊಂಡ ಮೊದಲ ಪಯಣದಲ್ಲಿ ಮೆಡಿಟರೇನಿಯನ್ ಸಮುದ್ರದ ನೀರಿನ ಪಾರದರ್ಶಕವಲ್ಲದ ನೀಲ ವರ್ಣವು
> ಬೆರಗು ಹುಟ್ಟಿಸಿತು. ಮೊದಲಿಗೆ ಸಮುದ್ರದೊಳಗೆ ಬೆಳಕಿನ ಕಿರಣಗಳು ಪ್ರವೇಶಿಸುವಾಗ ನೀರಿನ
> ಅಣುಗಳಲ್ಲಿ ನಡೆಯುವ ವಕ್ರೀಭವನದಿಂದಾಗಿ (ಬಾಗುವಿಕೆ) ನೀಲ ವರ್ಣ ಗೋಚರವಾಗುತ್ತಿರಬಹುದೆಂದು
> ಭಾಸವಾಗಿತ್ತು. ಅದೇ ವರ್ಷದ ಸೆಪ್ಟೆಂಬರಿನಲ್ಲಿ ಕೊಲ್ಕೊತ್ತಾಗೆ ಹಿಂದಿರುಗಿದ ರಾಮನ್ ಅವರು ಈ
> ಬಗ್ಗೆ ಗಹನವಾದ ಸಂಶೋಧನೆಗಳನ್ನು ಕೈಗೊಂಡರು. ಅನಿಲಗಳು, ಭಾಷ್ಪಗಳು, ಹರಳುಗಳು ಮತ್ತಿತರ
> ಬೆಳಕು ಹಾಯಬಲ್ಲ ಎಲ್ಲ ಮಾಧ್ಯಮಗಳ ಮೇಲೆ ತಮ್ಮ ಪ್ರಯೋಗಗಳನ್ನು ಅವರು ಮುಂದುವರಿಸಿದರು.
> ಸಮುದ್ರ ನೀರಿನಲ್ಲಿ ಸ್ಥಳೀಯವಾಗಿ ಬದಲಾಗುವ ಸಾಂದ್ರತೆಗೆ ಕಾರಣಗಳನ್ನು ಕಂಡುಕೊಳ್ಳಲು
> ಯತ್ನಿಸಿದರು. 1922-1927ರ ತನಕ ತಮ್ಮ ಸಹೋದ್ಯೋಗಿಗಳಾಗಿದ್ದ ಕೆ.ಎಸ್.ಕೃಷ್ಣನ್ ಮತ್ತು
> ಕೆ.ಆರ್.ರಾಮನಾಥನ್ ಅವರ ಜತೆಗೂಡಿ ತಾವು ಕಂಡುಕೊಂಡ ಹೊಸ ಹೊಳಹಿಗೆ ಭಾಷ್ಯವನ್ನು ಬರೆದರು.
> ಜಗತ್ತಿನ ಭೌತವಿಜ್ಞಾನಿಗಳ ಗಮನವನ್ನು ದಟ್ಟ ಸಾಂದ್ರತೆಯ ಮಾಧ್ಯಮದ ಅಣುಗಳಲ್ಲಿ ಬೆಳಕಿನ
> ಚದುರುವಿಕೆ ಎಂಬ ಹೊಸ ವಿಷಯದ ಬಗ್ಗೆ ಹರಿಸಿದರು.
>
> 1929ರಲ್ಲಿ ಜರುಗಿದ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಅಧ್ಯಕ್ಷೀಯ ಭಾಷಣದಲ್ಲಿ ಸ್ವತಃ
> ಸಿ.ವಿ.ರಾಮನ್ ಅವರು ತಾವು ಕಂಡುಕೊಂಡ ಕೌತುಕಗಳ ಕುರಿತು ಹೀಗೆ ಹೇಳಿದ್ದಾರೆ: ''ನೇರಳೆ
> ವರ್ಣದ ಗಾಜಿನ ಮೂಲಕ ಸೋಸಿ ಬಂದ ಸೂರ್ಯನ ಕಿರಣಗಳನ್ನು ಕೆಲವೊಂದು ದ್ರವಗಳು ಮತ್ತು
> ಘನವಸ್ತುಗಳಲ್ಲಿ (ಉದಾಹರಣೆಗೆ ನೀರು ಅಥವಾ ಮಂಜುಗಡ್ಡೆ) ಹಾಯಿಸಿದಾಗ, ಆ ವಸ್ತುವಿನಿಂದ
> ಹೊರಬಂದ ಬೆಳಕಿನಲ್ಲಿ ಹೊಸ ಕಿರಣಗಳು ಗೋಚರವಾದವು. ನಂತರ ಹಸಿರು ವರ್ಣದ ಗಾಜನ್ನು ನೇರಳೆ
> ವರ್ಣದ ಗಾಜು ಮತ್ತು ಬೆಳಕು ಸ್ವೀಕರಿಸುವ ವಸ್ತುವಿನ ನಡುವೆ ಇಟ್ಟು ನೋಡಿದಾಗ ಯಾವುದೇ
> ಕಿರಣಗಳೂ ಗೋಚರವಾಗಲಿಲ್ಲ. ಮತ್ತೆ ಹಸಿರು ವರ್ಣದ ಗಾಜನ್ನು ಕಣ್ಮುಂದೆ ಇಟ್ಟುಕೊಂಡು ಇದೇ
> ನೇರಳೆ ವರ್ಣದ ಗಾಜಿನಿಂದ ಸೋಸಿ ಬಂದ ಕಿರಣಗಳನ್ನು ವಸ್ತುವಿನತ್ತ ಹಾಯಿಸಿದಾಗ, ಕಿರಣಗಳು
> ಗೋಚರವಾದವು. ನೇರಳೆ ವರ್ಣದ ಬೆಳಕಿನ ಕಿರಣಗಳು ಹಸಿರು ವರ್ಣದ ಬೆಳಕಿನ ಕಿರಣಗಳಾಗಿ
> ಬದಲಾವಣೆಗೊಂಡಿದ್ದವು.''
>
> ತೀರಾ ಸರಳವಾಗಿ ರಾಮನ್ ಪರಿಣಾಮದ ತತ್ತ್ವವನ್ನು ವಿವರಿಸಬೇಕೆಂದರೆ, ಅಣುಗಳ ಮೇಲೆ ಬೆಳಕಿನ
> ಕಿರಣಗಳನ್ನು ಹಾಯಿಸಿದಾಗ ಕಿರಣಗಳು ಚದುರುವ ಕಾರಣ ಆ ಬೆಳಕಿನ ತರಂಗಾಂತರದಲ್ಲಿ ಬದಲಾವಣೆಗಳು
> ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಬೆಳಕಿನ ಸಲಾಕೆಯೊಂದನ್ನು ಧೂಳುರಹಿತ ವಾತಾವರಣದಲ್ಲಿಟ್ಟ
> ಪಾರದರ್ಶಕ ರಾಸಾಯನಿಕ ಮಿಶ್ರಣದ ಮೂಲಕ ಹಾಯಿಸಿದಾಗ, ಬೆಳಕಿನ ಕಿರಣಗಳ ಅಲ್ಪಭಾಗವು ಸಲಾಕೆಯು
> ಹಾಯುವ ಕೋನಕ್ಕಿಂತಲೂ ಕೊಂಚ ಓರೆಯಾಗಿ ಹೊರಬರುತ್ತದೆ. ಹೀಗೆ ಓರೆಯಾಗಿ ಹೊರಬರುವ ಬೆಳಕಿನ
> ಕಿರಣಗಳ ತರಂಗಾಂತರಗಳು ಮೂಲ ಸಲಾಕೆಯ ತರಂಗಾಂತರಗಳಿಗಿಂತಲೂ ಭಿನ್ನವಾಗಿರುತ್ತವೆ. ಈ ಭಿನ್ನ
> ತರಂಗಾಂತರಗಳಿಂದ ಹೊರಬರುವ ಬೆಳಕಿನ ಸ್ವಭಾವವನ್ನು ರಾಮನ್ ಪರಿಣಾಮ ಎಂದು ಗುರುತಿಸಲಾಗಿದೆ. ಈ
> ತತ್ತ್ವವನ್ನು ಸುಲಭವಾಗಿ ಅರ್ಥೈಸಿಕೊಳ್ಳಬೇಕೆಂದರೆ ಬೆಳಕು ಕೇವಲ ಫೋಟಾನ್ ಕಣಗಳ ರೂಪದಲ್ಲಿ
> ಮಾತ್ರ ಪ್ರವಹಿಸುತ್ತದೆಂದು ಪರಿಭಾವಿಸಬೇಕು. ಆದರೆ, ಬೆಳಕು ಅಲೆಗಳ ರೂಪದಲ್ಲೂ
> ಪ್ರವಹಿಸುತ್ತದೆಂಬ ವಿಷಯ ಇಲ್ಲಿ ಪರಿಗಣನೆಗೆ ಬರುವುದಿಲ್ಲ.
>
> 1930ರ ದಶಕದ ಕೊನೆಯ ಹೊತ್ತಿಗೆ ಯಾವುದೇ ರಾಸಾಯನಿಕ ಅಣುಗಳ ಪರೀಕ್ಷೆಯಲ್ಲಿ, ಮಾದರಿಯನ್ನು
> ಹಾಳುಗೆಡವದೇ ವಿಶ್ಲೇಷಿಸಲು, ರಾಮನ್ ಪರಿಣಾಮ ಆಧರಿತ ಉಪಕರಣಗಳನ್ನು ಬಳಸುವ ಪರಿಪಾಠ
> ಆರಂಭವಾಯಿತು. ಈ ಸಂದರ್ಭದಲ್ಲಿ ನಿರ್ಮಾಣವಾದುದೇ ರಾಮನ್ ಸ್ಪೆಕ್ಟ್ರೋಮೀಟರ್ ಎಂಬ
> ರೋಹಿತಮಾಪಕ. ಬಿಳಿಯ ಬೆಳಕಿನಿಂದ ವಿಭಜನೆಯಾದ ವಿವಿಧ ವರ್ಣಗಳ ಬೆಳಕಿನ ಕಿರಣಗಳ
> ಗುಣಲಕ್ಷಣಗಳನ್ನು ಈ ಯಂತ್ರವು ಗುರುತಿಸಬಲ್ಲದು. ದ್ವಿತೀಯ ಮಹಾಯುದ್ಧದ ವೇಳೆಗೆ ರಾಮನ್
> ಸ್ಪೆಕ್ಟ್ರೋಮೀಟರ್‌ನ ಜಾಗದಲ್ಲಿ ಇನ್‌ಫ್ರಾರೆಡ್ ಸ್ಪೆಕ್ಟ್ರೋಮೀಟರ್ ಅಂದರೆ ಬೆಳಕಿನ
> ಆವಗೆಂಪು ಕಿರಣಗಳನ್ನು ಬಳಸಿ ನಡೆಸುವ ಯಂತ್ರಕ್ಕೆ ಪ್ರಾಧಾನ್ಯ ಸಿಕ್ಕಿತು. 1960ರ ದಶಕದಲ್ಲಿ
> ಬೆಳಕಿನ ಸಾಂದ್ರ ಸಲಾಕೆ, ಲೇಸರ್ ಆವಿಷ್ಕಾರವಾಗುವ ತನಕ ರಾಮನ್ ಸ್ಪೆಕ್ಟ್ರಾಮೀಟರ್
> ಬಳಕೆಯಲ್ಲಿರಲಿಲ್ಲ. ತದನಂತರ ಲೇಸರ್ ಬೆಳಕಿನ ಸಲಾಕೆಗಳನ್ನು ಬಳಸಲು ಅನುವಾಗುವಂಥ
> ಮಾರ್ಪಾಡುಗಳನ್ನು ರಾಮನ್ ಸ್ಪೆಕ್ಟ್ರೋಮೀಟರ್‌ಗೆ ಮಾಡಲಾಯಿತು.
>
> ಈ ಹೊಸ ಯಂತ್ರದ ಮೂಲಕ ಇಂದು ಪೆಟ್ರೋರಾಸಾಯನಿಕಗಳು ಮತ್ತು ಔಷಧರಾಸಾಯನಿಕಗಳ ತಯಾರಿಕೆಯಲ್ಲಿ
> ರಾಸಾಯನಿಕ ಪ್ರಮಾಣದ ಬಗ್ಗೆ ನಿಗಾ ವಹಿಸಬಹುದಾಗಿದೆ. ಅಪರಾಧಗಳು ನಡೆದ ಸಂದರ್ಭದಲ್ಲಿ
> ಪೊಟ್ಟಣಗಳಲ್ಲಿಟ್ಟ ರಾಸಾಯನಿಕ ಕುರುಹುಗಳನ್ನು ಹೊರತೆಗೆಯದೆಯೇ ವಿಶ್ಲೇಷಿಸಲು ಇದೇ
> ಯಂತ್ರವನ್ನು ಬಳಸಲಾಗುತ್ತಿದೆ. ಹಾಗೆಯೇ ಸೂಕ್ಷ್ಮ ಬಿಡಿಭಾಗಕ್ಕೆ ಹಚ್ಚಿದ ವರ್ಣದ್ರವ್ಯ
> ಎಷ್ಟರಮಟ್ಟಿಗೆ ಒಣಗಿದೆಯೆಂಬುದನ್ನು ಅರಿಯಬಹುದು. ಸುರಕ್ಷ ಅಂತರದಿಂದ ಪರಮಾಣು ವಿದ್ಯುತ್
> ಸ್ಥಾವರಗಳ ತ್ಯಾಜ್ಯದ ರಾಸಾಯನಿಕ ಅಂಶಗಳನ್ನು ಅಳೆಯಬಹುದು. ಕ್ಯಾನ್ಸರ್ ರೋಗದ ಆರಂಭದ
> ಹಂತಗಳನ್ನು ಕೋಶ ಬದಲಾವಣೆಗಳನ್ನು ದಾಖಲಿಸಬಲ್ಲ ಈ ಯಂತ್ರದ ಮೂಲಕ ಅರಿಯಬಹುದು.
>
> ಚರ್ಚೆಯ ವಿಷಯಗಳು
>
> ಫೆಬ್ರವರಿ 28 ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು
> ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ
> ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ
> 28ರಂದು ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ
> ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದರು. ಎರಡು ವರ್ಷಗಳ ನಂತರ ಈ ಆವಿಷ್ಕಾರಕ್ಕಾಗಿ
> ರಾಮನ್ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು. ಮುಂದಿನ ದಿನಗಳಲ್ಲಿ ಅದು ರಾಮನ್
> ಪರಿಣಾಮವೆಂದೇ ಪ್ರಸಿದ್ಧವಾಯಿತು. ಇದು ಇತಿಹಾಸ. 1987ರಿಂದಲೂ ದೇಶಾದ್ಯಂತ ಫೆಬ್ರವರಿ
> 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 1999ರಿಂದ ಕೇಂದ್ರ ಸರ್ಕಾರದ
> ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ವಿಜ್ಞಾನ ದಿನದಂದು ಚರ್ಚಿಸಲಾಗುವ
> ವಿಷಯವನ್ನು ಮೊದಲೇ ಘೋಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆದ್ಯತೆಯ ಘೋಷ ವಾಕ್ಯವಾದ
> ಮೇಕ್ ಇನ್ ಇಂಡಿಯಾ ಕುರಿತಂತೆ ಈ ವರ್ಷ ಚರ್ಚೆಗಳು ನಡೆಯಲಿವೆ.
>
> 1999: ಬದಲಾಗುತ್ತಿರುವ ನಮ್ಮ ಪೃಥ್ವಿ
>
> 2000: ಮೂಲ ವಿಜ್ಞಾನದತ್ತ ಆಸಕ್ತಿಯನ್ನು ಕೆರಳಿಸುವ ಮರುಯತ್ನ
>
> 2001: ವಿಜ್ಞಾನ ಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನ
>
> 2002: ಕಸದಿಂದ ರಸ
>
> 2003: ಜೀವರಾಶಿಯ ನೀಲನಕ್ಷೆ ಡಿ.ಎನ್.ಎ.ನ 50 ವರ್ಷಗಳು ಮತ್ತು ಐ.ವಿ.ಎಫ್.ನ 25 ವರ್ಷಗಳು
>
> 2004: ಸಮುದಾಯದಲ್ಲಿ ವಿಜ್ಞಾನ ಪ್ರಜ್ಞೆಗೆ ಪ್ರೋತ್ಸಾಹ
>
> 2005: ಭೌತವಿಜ್ಞಾನದ ಸಂಭ್ರಮಾಚರಣೆ
>
> 2006: ನಮ್ಮ ಭವಿಷ್ಯತ್ತಿಗಾಗಿ ಪ್ರಕೃತಿಯ ಪರಿಪಾಲನೆ
>
> 2007: ಪ್ರತಿ ನೀರಹನಿಗೂ ಹೆಚ್ಚು ಬೆಳೆ
>
> 2008: ಭೂಗ್ರಹ ಅರ್ಥೈಸಿಕೊಳ್ಳುವಿಕೆ
>
> 2009: ವಿಜ್ಞಾನ ಕ್ಷಿತಿಜದ ವಿಸ್ತರಣೆ
>
> 2010: ಸುಸ್ಥಿರ ಅಭಿವೃದ್ಧಿಗಾಗಿ ಲಿಂಗ ಸಮಾನತೆ, ವಿಜ್ಞಾನ ಮತ್ತು ತಂತ್ರಜ್ಞಾನ
>
> 2011: ನಿತ್ಯ ಜೀವನದಲ್ಲಿ ರಸಾಯನವಿಜ್ಞಾನ
>
> 2012: ಪರಿಶುದ್ಧ ಇಂಧನದ ಆಯ್ಕೆಗಳು ಮತ್ತು ಪರಮಾಣು ಸ್ಥಾವರಗಳ ಸುರಕ್ಷೆ
>
> 2013: ತಳಿ ಮಾರ್ಪಾಡಾದ ಬೆಳೆಗಳು ಮತ್ತು ಆಹಾರ ಭದ್ರತೆ
>
> 2014: ವೈಜ್ಞಾನಿಕ ಮನೋಭಾವದ ಪೋಷಣೆ
>
> 2015: ರಾಷ್ಟ್ರ ನಿರ್ಮಾಣಕ್ಕಾಗಿ ವಿಜ್ಞಾನ
>
> 2016: ಭಾರತದಲ್ಲೇ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೇರಿತ ಹೊಸಶೋಧಗಳು
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email harihusk...@gmail.com
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to